ಆಂಜಿಯೋಗ್ರಾಂ ಎಂದರೆ ರಕ್ತನಾಳ ಚಿತ್ರ. ಹೃದಯದ ಒಳರಚನೆಯನ್ನು, ರಕ್ತನಾಳಗಳ ಒಳಹಾದಿಯನ್ನು ಕಾಣಲು ಅಲ್ಲಿ ಪ್ರವೇಶಿಸುವ ರಕ್ತ ವಿಕಿರಣತೆಗೆ ಸಾಂದ್ರವಾಗಿರಬೇಕು. ಅದರಿಂದ ಅಲ್ಲಿರುವ ಬೇರೆ ಊತಕಗಳಿಂದ ಅದರ ಭೇದಗಾಣಿಕೆ ಸಾಧ್ಯ. ಅಲ್ಲದೆ ವೇಗಗತಿಯಿಂದ ಒಂದರ ನಂತರ ಮತ್ತೊಂದರಂತೆ ಚಿತ್ರವನ್ನು ತೆಗೆದರೆ ಅದು ಮಸುಕಾದ ರಕ್ತದ ಹರಿವನ್ನು ತೋರಿಸಿಕೊಡುತ್ತದೆ. ಅದನ್ನು ಬಳಸಿ ಹೃದಯಕೋಶಗಳಲ್ಲಿ, ಹೃದಯ ರಕ್ತಪೂರೈಸುವ ಕಿರೀಟಕಧಮನಿಯಲ್ಲಿ, ಹೃದಯದಿಂದ ಹೊರಹೊಮ್ಮುವ ಮಹಾಧಮನಿಯಲ್ಲಿ ಮತ್ತು ಮೂತ್ರಪಿಂಡಕ್ಕೆ ರಕ್ತಪೂರೈಸುವ ಮೂತ್ರ ಪಿಂಡಧಮನಿಯಲ್ಲಿ ಹಾಗೂ ಮಿದುಳಿಗೆ ರಕ್ತ ಪೂರೈಸುವ ಕೇರಳ ಧಮನಿಗಳಲ್ಲಿ ಹರಿಯುವ ರಕ್ತಪ್ರವಾಹವನ್ನೂ, ಪ್ರವಾಹಕ್ಕೆ ಏನಾದರೂ ಅಡತಡೆಗಳು ಉಂಟಾಗಿದೆಯೋ ಹೇಗೆಂಬುದನ್ನು ಕಾಣಬಹುದು.

	 ರಕ್ತನಾಳದೊಳಕ್ಕೆ ವಿಕಿರಣಕ್ಕೆ ಮಸುಕಾದ (ರೇಡಿಯೊಬಪೇಕ್) ಭೇದಗಾಣಿಕೆ ವಸ್ತುವಾಗಿ ಸೇಂದ್ರಿಯ (ಆರ್ಗಾನಿಕ್) ಅಯೋಡಿನ್ ವಸ್ತುವಿನ ದ್ರಾವಕವನ್ನು ಬಳಸಲಾಗುವುದು ಮತ್ತು ದೊರೆಯುವ ಪ್ರತಿಮೆ (ಇಮೇಜ್)ನ್ನು ಹೆಚ್ಚು ಸ್ಫುಟವಾಗಿ ತೋರಿಸುವ ಉಪಕರಣದಿಂದ (ಇನ್‍ಟೆಸ್ಸಿಫೈಯರ್) ಚಿತ್ರವನ್ನು ತೆರೆಯ ಮೇಲೆ ಕಾಣಬಹುದು ಇಲ್ಲವೆ ಫಿಲಂ ಮೇಲೆ ಮೂಡಿಸಬಹುದು. ಇಲ್ಲಿ ಚಿತ್ರವನ್ನು ಅನೇಕ ಕೋನಗಳಿಂದ ತೆಗೆಯಲಾಗುತ್ತದೆ. ಈ ದ್ರಾವಕವನ್ನು ರಕ್ತನಾಳದ ನಿರ್ದಿಷ್ಟ ತಾಣದಲ್ಲಿ ಸೇರಿಸಲು ಮೊದಲು ರಕ್ತನಾಳಕೋಶಕ್ಕೆ ತೂರ್ನಳಿಗೆ (ಕೆಥೀಟರ್) ಸೇರಿಸಬೇಕು.

	 ತೂರ್ನಳಿಗೆಯನ್ನು ತನ್ನ ರಕ್ತನಾಳದೇಶಕ್ಕೆ ಸೇರಿಸಿದ ಪ್ರಥಮ ವ್ಯಕ್ತಿ ವರ್ನರ್ ಫಾರ್ಸ್‍ಮನ್. ಅಂತಹ ಪ್ರಯೋಗವನ್ನೂ ಆಯಾ 1929ರಲ್ಲಿ ಮಾಡಿದ. ಅದನ್ನು ರೋಗನಿದಾನ ಸಾಧನವಾಗಿ ಬಳಸಿದ ಕೀರ್ತಿ ಆಂದ್ರೆ ಕೂರ್ನಾಂಡ್ ಮತ್ತು ಡಿಕಿನ್‍ಸನ್ ರಿಚಕ್ರ್ಸ್(1956) ವಿಸ್ತರಿಸಿದರು. ಅದನ್ನು ಕಿರೀಟಕಧಮನಿಗೆ ಸೀಮಿತವಾದ ಚಿತ್ರ ತೆಗೆಯಲು ಮೇಸನ್ ಸ್ಟೋನ್ಸ್ 1962ರಲ್ಲಿ ಬಳಸಿದರು. ಅದನ್ನು ಮುಂದೆ ಮೆಲ್ವಿನ್ ಯುಕ್ ಕಿನ್ಸ್ ಮಾರ್ಪಾಟುಮಾಡಿದರು.

	 ಆಂಜಿಯೋಗ್ರಾಂನಿಂದ ಮಿದುಳು, ಮೂತ್ರಪಿಂಡ, ಮಹಾಧಮನಿಯ ಇಲ್ಲವೆ ಕಿರೀಟಕಧಮನಿಯಲ್ಲಿ ರಕ್ತಪ್ರವಾಹಕ್ಕೆ ಉಂಟಾಗಿರುವ ಅಡಚಣೆಯನ್ನು ಕರಾರುವಾಕ್ಕಾಗಿ ತಿಳಿಯಬಹುದು. ಆ ಚಿತ್ರ ರೋಗದ ವಿಸ್ತಾರ ಮತ್ತು ತೀವ್ರತೆಯ ವಿವರ ನೀಡುತ್ತದೆ. ಕಿರೀಟಕಧಮನಿ ಚಿತ್ರದ ಹಿನ್ನೆಲೆಯಲ್ಲಿ ರೋಗಿ ಬೈಪಾಸ್ ಸರ್ಜರಿ ಹೊಂದಬೇಕೋ ಬೇಡವೋ ಎಂಬುದನ್ನು ನಿರ್ಧರಿಸಬಹುದಾಗಿದೆ. ರೋಗಿಯ ಪರೀಕ್ಷೆ ಮತ್ತು ದೇಹದೊಳಕ್ಕೆ ಯಾವ ವಸ್ತು ಸೇರಿಸದೆ ಮಾಡಿದ ಪರೀಕ್ಷೆಗಳು ಕಿರೀಟಕಧಮನಿಯ ರೋಗ ತೋರಿಸದಿದ್ದರೆ ಆಂಜಿಯೋಗ್ರಾಂ ತೆಗೆಯುವ ಅಗತ್ಯವಿಲ್ಲ.

	 ಆಂಜಿಯೋಗ್ರಾಂನ್ನು ಚರ್ಮದ ಮೂಲಕ ತೇಡೆಧಮನಿಯಲ್ಲಿ ಸೇರಿಸಿದ ತೂರ್ನಳಿಗೆಯನ್ನು ಮುಂದೆ ಸಾಗಿಸಿ ಹೃದಯದ ಮೂಲಕ ಕಿರೀಟಕಧಮನಿಯ ಉಗಮಕ್ಕೆ ಸಾಗಿಸಿ, ಅವುಗಳ ತಂತಿಯ ಮೂಲಕ ಎಡ ಮತ್ತು ಬಲ ಕಿರೀಟಕಧಮನಿಗಳನ್ನು ತಲುಪಿದಾಗ, ಭೇದಗಾಣಿಕೆ ದ್ರವವನ್ನು ಅಲ್ಲಿ ಹಂಚಿಸಲಾಗುತ್ತದೆ. ಅದರಲ್ಲಿ ಅಲ್ಲಿ ಜರುಗುವ ರಕ್ತಹರಿವಿನ ವಿವರ ಪಡೆಯಬಹುದು. ಅಪರೂಪವಾಗಿ ರೋಗಿ ಪರಿಧಿಯ (ಪೆರಿಫರಲ್) ರಕ್ತನಾಳ ರೋಗ ಹೊಂದಿ ಅಲ್ಲಲ್ಲಿ ರಕ್ತನಾಳಗಳು ಮುಚ್ಚಿಹೋಗಿದ್ದರೆ ಕೆಥಿಟರನ್ನು ರೇಡಿಯಲ್ ಅಥವಾ ಬ್ರೇಕಿಯಲ್ ಧಮನಿಗಳ ಮೂಲಕ ಸೇರಿಸಬೇಕಾಗುವುದು.

	ಕಿರೀಟಧಮನಿಯ ಚಿತ್ರ ಅಲ್ಲಿ ತೋರಿಬರುವ ಅಡಚಣೆಯ ವ್ಯಾಪಕತೆಯನ್ನು ತಿಳಿಸುತ್ತದೆ. ಎಡ ಕಿರೀಟಕಧಮನಿ ಉಗಮವಾದ ನಂತರ ಎಡ ಮುಂದಿರುವ ಧಮನಿ ಮತ್ತು ಎಡಸುತ್ತುಭಾಗದ ಧಮನಿ ಎಂದು ಎರಡು ಕವಲಾಗುತ್ತದೆ. ಮತ್ತೊಂದು ಬಲಕಿರೀಟಕಧಮನಿ. ಇಲ್ಲಿರುವ ಅಡ್ಡಿಯು ಒಂದು ರಕ್ತನಾಳಕ್ಕೆ, ಇಲ್ಲವೆ ಎರಡು-ಮೂರು ರಕ್ತನಾಳಗಳಿಗೆ ಸೀಮಿತವಾಗಿದೆಯೋ ಹೇಗೆಂಬುದನ್ನು ಧಮನಿ ಚಿತ್ರಣದಿಂದ ನಿರ್ಧರಿಸಲಾಗುತ್ತದೆ. ರಕ್ತಪ್ರವಾಹಕ್ಕೆ ಅಲ್ಲಿರುವ ಅಡ್ಡಿಯನ್ನು ಸಹಜ ರೀತಿಯಲ್ಲಿರುವ ಧಮನಿಯ ಬೇರೆ ತುಣುಕುಗಳ ಜೊತೆ ಹೋಲಿಸಿ ಅದನ್ನು ಶೇಕಡಾವಾರು ಅಡ್ಡಿ ಎಂದು ಲೆಕ್ಕಹಾಕಲಾಗುತ್ತದೆ ಒಂದು ರಕ್ತನಾಳದಲ್ಲಿ ಶೇಕಡಾ 50 ಕ್ಕಿಂತ ಹೆಚ್ಚು ಪ್ರಮಾಣದಲ್ಲಿ ಅಡ್ಡಿಯಿದ್ದರೆ ಅದು ಗಣನೀಯ.

	 ಆಂಜಿಯೋಗ್ರಾಂ ಮಾಡುತ್ತಿರಲು ರೋಗಿ ಬಾಯಿಂದ ರಕ್ತ ಕರೆಗೆ ವಿರೋಧಿ ಔಷಧಗಳನ್ನು (ತುರ್ತು ಸನ್ನಿವೇಶ ಹೊರತುಪಡಿಸಿ) ಸೇವಿಸುತ್ತಿರಬಾರದು. ಸಕ್ಕರೆ ಕಾಯಿಲೆ ಚಿಕಿತ್ಸೆಗಾಗಿ ಮೆಟ್‍ಫಾರ್ಮಿನ್ ಗುಳಿಗೆ ತೆಗೆದುಕೊಳ್ಳುತ್ತಿದ್ದರೆ ಅದನ್ನು ನಿಲ್ಲಿಸಬೇಕು. ತೇಕಧಮನಿಯಿಂದ ತೂರ್ನಳಿಗೆ ಸೇರಿಸಿದ್ದರೆ ಅಲ್ಲಿ ರಕ್ತ ಹೊರಸುರಿಯುವಿಕೆಯನ್ನು ತಪ್ಪಿಸಲು ಬ್ಯಾಂಡೇಜನ್ನು ಆರೆಂಟು ಘಂಟೆಗಳ ಕಾಲ ಒತ್ತಿ ಕಟ್ಟಬೇಕು ಮತ್ತು ರೋಗಿ ವಿಶ್ರಾಂತಿ ಪಡೆಯಬೇಕು.

	 ತುಂಬ ಅಪರೂಪವಾಗಿ ಆಂಜಿಯೋಗ್ರಾಂನ್ನು ತುರ್ತಾಗಿ ಕೈಕೊಂಡರೆ ಹೃದಯಾಘಾತವಾಗುವ, ಹೃದಯ ಬಡಿದ ಪ್ರಾಸಣೆಡಿಕೆ ಕಾಣಬಹುದು. ಭೇದಗಾಣಿಕೆ ವಸ್ತು ಮೂತ್ರಪಿಂಡದ ಸೋಲುವಿಕೆಯನ್ನು ಅಪರೂಪವಾಗಿ ಉಂಟುಮಾಡಬಹುದು. 

(ಪಿ.ಎಸ್.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ